ನವದೆಹಲಿ, ಸ.12 (DaijiworldNews/HR): "ದೇಶದ ನ್ಯಾಯಾಂಗ ವ್ಯವಸ್ಥೆ ಇಂದಿಗೂ ಕೂಡ ಯೋಗ್ಯ ಅನುಕೂಲವಿಲ್ಲದೆ ಶಿಥಿಲಾವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬ್ರಿಟಿಷರ ಭಾರತ ಬಿಟ್ಟು ಹೋದ ಬಳಿಕ ನ್ಯಾಯಾಂಗ ವ್ಯವಸ್ಥೆಯನ್ನು ಉತ್ತಮ ಮೂಲಸೌಕರ್ಯಗಳಿಂದ ಕಡೆಗಣಿಸಲಾಗಿದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಭಾರತದಲ್ಲಿ ಕೋರ್ಟ್ಗಳು ಮೂಲಭೂತ ವ್ಯವಸ್ಥೆಗಳಿಲ್ಲದೆ ಇಂದಿಗೂ ಶಿಥಿಲಾವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಪರಿಸ್ಥಿತಿ ಕೋರ್ಟ್ಗೆ ಆಗಮಿಸುವ ಕಕ್ಷಿಗಾರರು ಮತ್ತು ವಕೀಲರಿಗೆ ಅಹಿತಕರವಾಗಿದ್ದು, ಇದರಿಂದ ಕೋರ್ಟ್ನ ಕೆಲಸಗಳು ಸಮರ್ಪಕವಾಗಿ ನಡೆಸಲು ಕಷ್ಟವಾಗುತ್ತಿದೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಬಳಿಕ ಕೋರ್ಟ್ಗೆ ಒದಗಿಸಬೇಕಿದ್ದ ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ಕಡೆಗಣಿಸಲಾಗಿದೆ" ಎಂದಿದ್ದಾರೆ.
ಇನ್ನು ರಾಷ್ಟ್ರೀಯ ನ್ಯಾಯಾಂಗ ಪೂರ್ವರಚನೆ ನಿಗಮಕ್ಕೆ ಒತ್ತು ನೀಡಲು ಇದೇ ಕಾರಣವಾಗಿದ್ದು, ರಾಷ್ಟ್ರೀಯ ನ್ಯಾಯಾಲಯ ಅಭಿವೃದ್ಧಿ ಯೋಜನೆಯ ಪರಿಕಲ್ಪನೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ತರುವ ಕೆಲಸವನ್ನು ಎನ್ಜೆಐಸಿ ನಿರ್ವಹಿಸಲಿದೆ" ಎಂದು ಹೇಳಿದ್ದಾರೆ.