ಶಿವಮೊಗ್ಗ, ಅ.25 (DaijiworldNews/PY): "ಸದ್ಯ ಶಾಲಾ ಸಿಲೆಬಸ್ ಕಡಿತದ ಕುರಿತು ಯೋಚನೆ ಇಲ್ಲ. ಅಗತ್ಯ ಬಿದ್ದರೆ ಸಿಲೆಬಸ್ ಕಡಿತದ ಕುರಿತು ಚಿಂತನೆ ಮಾಡುತ್ತೇವೆ" ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.

ಶಿವಮೊಗ್ಗದ ಮಲವಗೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಲೆಬಸ್ ಕಡಿತದ ಬಗ್ಗೆ ಡಿಸೆಂಬರ್ನಲ್ಲಿ ಒಂದು ಸಭೆ ಮಾಡಿ, ಅಗತ್ಯ ಬಿದ್ದರೆ ಮಾತ್ರವೇ ಪರೀಕ್ಷೆಗೆ ಸಿಲೆಬಸ್ ಕಡಿಮೆ ಮಾಡುತ್ತೇವೆ. ಆದರೆ, ಮಕ್ಕಳ ಬೋಧನೆ ವಿಚಾರವಾಗಿ ಸಿಲೆಬಸ್ ಕಡಿತ ಮಾಡುವುದಿಲ್ಲ. ರಜೆ ದಿನಗಳನ್ನು ಕೂಡಾ ಬಳಸಿಕೊಂಡು ಮಕ್ಕಳಿಗೆ ಬೋಧನೆ ಮಾಡಿ, ಶಿಕ್ಷಣ ನೀಡುತ್ತೇವೆ" ಎಂದು ತಿಳಿಸಿದ್ದಾರೆ.
"ಇದೀಗ ರಾಜ್ಯದಲ್ಲಿ ಹಂತಹಂತವಾಗಿ ಎಲ್ಲಾ ಶಾಲೆಗಳು ಪ್ರಾರಂಭವಾಗಿವೆ. ಕೆಲವು ಶಾಲೆಗಳಲ್ಲಿ ಇನ್ನಷ್ಟು ವ್ಯವಸ್ಥೆಗಳನ್ನು ಮಾಡಬೇಕಿದೆ. ಪ್ರತಿವರ್ಷ ಮಕ್ಕಳ ಸಂಖ್ಯೆ ಆಧರಿಸಿ, ಶಾಲೆಗಳ ಮೂಲಸೌಕರ್ಯ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.
"ಶಾಲೆ ಯಾವಾಗ ಆರಂಭವಾಗುತ್ತದೆ ಎಂದು ಕಳೆದ 15 ದಿನಗಳಿಂದ ಪೋಷಕರು ಕಾಯುತ್ತಿದ್ದರು. ಇಂದು ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ನಾನೂ ಸಹ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳು ಖಷಿಯಿಂದ ಶಾಲೆಗೆ ಬಂದಿದ್ದಾರೆ" ಎಂದು ಹೇಳಿದ್ದಾರೆ.