ನವದೆಹಲಿ, ನ 23 (DaijiworldNews/MS): ಸಹಕಾರ ಸಂಘಗಳು ತಮ್ಮ ಹೆಸರಿನ ಜತೆಗೆ "ಬ್ಯಾಂಕ್" ಪದವನ್ನು ಉಪಯೋಗಿಸುವುದು ಮತ್ತು ತಮ್ಮ ಸದಸ್ಯರಲ್ಲದವರಿಂದಲೂ ಠೇವಣಿ ಸ್ವೀಕರಿಸಿಕೊಳ್ಳುತ್ತಿರುವ ವಿಚಾರದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸಲಹೆ ನೀಡಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ತಿದ್ದುಪಡಿಯ ನಂತರ, ಸೆಪ್ಟೆಂಬರ್ 29, 2020 ರಿಂದ ಜಾರಿಗೆ ಬರುವಂತೆ, ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯ್ದೆಯ ಅನ್ವಯ ಕಾಯಿದೆಯ ನಿಯಮಗಳ ಅನುಸಾರ ಅಥವಾ ಆರ್ಬಿಐಯಿಂದ ಅನುಮತಿ ಹೊಂದಿರುವ ಸಹಕಾರ ಸಂಘಗಳನ್ನು ಹೊರತು ಪಡಿಸಿ ಇತರ ಸಹಕಾರ ಸಂಘಗಳು ತಮ್ಮ ಹೆಸರುಗಳ ಭಾಗವಾಗಿ "ಬ್ಯಾಂಕ್", "ಬ್ಯಾಂಕರ್" ಅಥವಾ "ಬ್ಯಾಂಕಿಂಗ್" ಪದಗಳನ್ನು ಬಳಸುವಂತಿಲ್ಲ.ಆದರೂ ಕೆಲವು ಸಹಕಾರಿ ಸಂಘಗಳು ಬ್ಯಾಂಕ್ ಪದವನ್ನು ಉಪಯೋಗಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಆರ್ಬಿಐ ಸಲಹೆ ನೀಡಿದೆ.
ಕೆಲವು ಸಹಕಾರ ಸಂಘಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದವರು/ನಾಮಮಾತ್ರ ಸದಸ್ಯರು/ ಸಹವರ್ತಿ ಸದಸ್ಯರಿಂದ ಬ್ಯಾಂಕಿಂಗ್ ವ್ಯವಹಾರ ನಡೆಸುವುದಕ್ಕೆ ಸಮಾನವಾಗಿರುವ ಠೇವಣಿಗಳನ್ನು ಸ್ವೀಕರಿಸುತ್ತಿರುವುದು ಆರ್ಬಿಐ ಗಮನಕ್ಕೆ ಬಂದಿದೆ.ಅಂತಹ ಸಂಘಗಳಿಗೆ ಬಿಆರ್ ಕಾಯಿದೆ, 1949 ರ ಅಡಿಯಲ್ಲಿ ಯಾವುದೇ ಪರವಾನಗಿಯನ್ನು ನೀಡಲಾಗಿಲ್ಲ ಅಥವಾ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಲು ಆರ್ಬಿಐನಿಂದ ಅಧಿಕಾರ ಪಡೆದಿಲ್ಲ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ" ಎಂದುಆರ್ಬಿಐ ಹೇಳಿದೆ.