ರಾಮನಗರ, ಜ 03 (DaijiworldNews/HR): ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾಗದ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಮುಖ್ಯಮಂತ್ರಿಗಳು ಆಗಮಿಸಿದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ ಎಂದು ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಡಿರುವ ಅವರು, "ನಾಡಗೀತೆ ಹಾಡುವಾಗ ಗಲಾಟೆ ಮಾಡುವುದು ಮತ್ತು ನಾಡಪ್ರಭುಗಳ ಪ್ರತಿಮೆ ಅನಾವರಣ ಮಾಡುವಾಗ ದುರ್ವರ್ತನೆ ತೋರುವುದು ಸರಿಯೇ" ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯಕ್ಕೆ ಎರಡು ಮುಖ್ಯಮಂತ್ರಿಗಳನ್ನು ಕೊಟ್ಟ ನಮ್ಮ ರಾಮನಗರ ಅಭಿವೃದ್ಧಿ ವಿಚಾರವಾಗಿ ಹೆಸರು ಗಳಿಸಬೇಕೇ ಹೊರತು ಗೂಂಡಾಗಿರಿಯಿಂದಾಗಿ ಅಲ್ಲ. ಅಂತಹ ಅನಾಗರಿಕ ವರ್ತನೆ ತೋರುವುದು ರಾಜ್ಯದಲ್ಲಿ ಕೇವಲ ಒಂದು ಪಕ್ಷದಿಂದ ಮಾತ್ರ ಸಾಧ್ಯ. ನಿಮ್ಮ ಹೋರಾಟ ಅಭಿವೃದ್ಧಿ ವಿಚಾರವಾಗಿರಲಿ, ಅಧಿಕಾರದ ವಿಚಾರವಾಗಿ ಅಲ್ಲ ಎಂದು ಹೇಳಿದ್ದಾರೆ.