ಬೆಂಗಳೂರು, ಜ 04 (DaijiworldNews/PY): ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಬಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ್ದ ಸಮನ್ಸ್ ಪ್ರಶ್ನಿಸಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ವಿಚಾರಣೆ ಸಂದರ್ಭ ಮಾತನಾಡಿದ ಅಜರ್ಜಿದಾರರ ಪರ ವಕೀಲ ಶ್ರೀನಿವಾಸ್ ರಾವ್, "ಇದು ಪರಿಗಣನೆಗೆ ಅರ್ಹವಲ್ಲ ಪ್ರಕರಣವಾಗಿದೆ. ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಯಮವನ್ನು ಪಾಲಿಸಿಲ್ಲ. ಹಾಗಾಗಿ ಸಮನ್ಸ್ ಜಾರಿಗೆ ಮಧ್ಯಂತರ ತಡೆ ನೀಡಬೆಕು. ನಿಯಮ ಪಾಲನೆ ಮಾಡದೇ ಇರುವ ಕಾರಣದಿಂದ ಪ್ರಕರಣ ರದ್ದುಗೊಳಿಸಬೇಕು" ಎಂದು ಮನವಿ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಅವರು, 2019ರ ಲೋಕಸಭಾ ಚುನಾವಣೆಯ ಸಂದರ್ಭ ಹಂಚಿದ್ದ ಕರಪತ್ರದಲ್ಲಿ ಪ್ರಕಾಶಕರು ಹಾಗೂ ಮುದ್ರಕರ ವಿವರಗಳು ಇರಲಿಲ್ಲ. ಈ ಕರಪತ್ರಕ್ಕೆ ಖರ್ಚಾದ ಲೆಕ್ಕವನ್ನು ಮರೆಮಾಚಲಾಗಿದೆ. ಇದು ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 127ರ ಉಲ್ಲಂಘನೆ. ಹಾಗಾಗಿ, ತೇಜಸ್ವಿ ಸೂರ್ಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದಾಪುರ ಠಾಣೆಯಲ್ಲಿ ದೂರ ದಾಖಲಾಗಿತ್ತು.