ಮಹಾರಾಷ್ಟ್ರ, ಜ 25 (DaijiworldNews/KP): ಮಹಾರಾಷ್ಟ್ರದ ವಾರ್ಧಾದಲ್ಲಿ ಕಾರಿಗೆ ಕಾಡುಪ್ರಾಣಿಯೊಂದು ಅಡ್ಡಬಂದ ಪರಿಣಾಮ ಬಿಜೆಪಿ ಶಾಸಕನ ಪುತ್ರ ಸೇರಿ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟ ದುರ್ಘಟನೆ ಸೋಮವಾರ ರಾತ್ರಿ 11.30ರ ಹೊತ್ತಿಗೆ ನಡೆದಿದೆ.

ಮೃತ ವೈದ್ಯಕೀಯ ವಿದ್ಯಾರ್ಥಿಗಳನ್ನು ಆವಿಷ್ಕಾರ್, ನೀರಜ್ ಚವನ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಎಂದು ಗುರುತಿಸಲಾಗಿದೆ. ಇವರಲ್ಲಿ ಆವಿಷ್ಕಾರ್ ಬಿಜೆಪಿಯ ತಿರೋರಾ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯ್ ಭರತಲಾಲ್ ರಹಂಗ್ಡೇಲ್ರ ಪುತ್ರ ಎಂದು ಹೇಳಲಾಗಿದ್ದು, ಉಳಿದ 3ಮಂದಿ ಉತ್ತರ ಪ್ರದೇಶ, ಇಬ್ಬರು ಬಿಹಾರ ಮತ್ತು ಒಬ್ಬಾತ ಒಡಿಶಾದವನೆಂದು ತಿಳಿದು ಬಂದಿದೆ.
ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಿಸಲು ಇವರೆಲ್ಲ ಹೋಗಿದ್ದು, ಪಾರ್ಟಿ ಮುಗಿಸಿ ವಾಪಸ್ ಬರುವಾಗ ಇವರ ಕಾರಿಗೆ ಕಾಡುಪ್ರಾಣಿಯೊಂದು ಅಡ್ಡಬಂದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ವಾರ್ದಾ ಎಸ್ಪಿ ಪ್ರಶಾಂತ್ ಹೋಲ್ಕರ್, ಕಾಡು ಪ್ರಾಣಿ ಅಡ್ಡ ಬಂದಿದನ್ನು ತಪ್ಪಿಸಲು ಕಾರನ್ನು ಬಲವಾಗಿ ತಿರಿಗಿಸಿದ ಪರಿಣಾಮ ಅಲ್ಲಿಯೇ ಇದ್ದ ಸೇತುವೆ ಕಟ್ಟೆಗೆ ಡಿಕ್ಕಿ ಹೊಡೆದು, ಕಾರು ಮೋರಿಗೆ ಬಿದ್ದಿದೆ. ಅಪಘಾತದ ತೀವ್ರತೆಗೆ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟಿದ್ದು, ಕಾರು ಸಂರ್ಪೂಣ ಜಖಂಗೊಂಡಿದೆ.ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.