ಬೆಳಗಾವಿ, ಏ 12 (DaijiworldNews/DB): ನನ್ನ ಪತಿ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತ ಗುತ್ತೆದಾರ ಸಂತೋಷ್ ಪಾಟೇಲ್ ಪತ್ನಿ ಜಯಶ್ರೀ ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಬಸವೇಶ್ವರನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವ ಅವರದಲ್ಲ. ನಿನ್ನೆಯೂ ನನ್ನೊಂದಿಗೆ ಚೆನ್ನಾಗಿ ಮಾತನಾಡಿದ್ದರು. ಅವರನ್ನು ಕೊಲೆ ಮಾಡಲಾಗಿದೆ. ಈ ಸಾವಿಗೆ ಸಚಿವ ಈಶ್ವರಪ್ಪನೇ ಕಾರಣ ಎಂದು ಆಪಾದಿಸಿದರು.
ಪತಿ ಸಾಲ ಮಾಡಿ ರಸ್ತೆ ಕಾಮಗಾರಿ ನಡೆಸಿದ್ದರು. ಆದರೆ ಆ ಬಳಿಕ ನನಗೆ ಸಂತೋಷ್ ಪರಿಚಯ ಇಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ನಮ್ಮ ಹಣದಲ್ಲಿ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಸಲು ನಮಗೇನು ಹಣ ಹೆಚ್ಚಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಪಕ್ಷಕ್ಕಾಗಿ ನನ್ನ ಪತಿ ಜೀವವನ್ನೇ ಕಳೆದುಕೊಂಡರು. ಎರಡು ವರ್ಷದ ಪುಟ್ಟ ಮಗುವಿನೊಂದಿಗೆ ನಾನು ಮುಂದಿನ ಜೀವನವನ್ನು ಹೇಗೆ ಕಳೆಯಲಿ ಎಂದು ಆಕ್ರೋಶಿತರಾದರು.