ಲಖನೌ, ನ 25 (DaijiworldNews/HR): ಶ್ರದ್ಧಾ ವಾಕರ್ ಹತ್ಯೆಯನ್ನು ಬೆಂಬಲಿಸಿದ ಮತ್ತು ತಾನು ಮುಸ್ಲಿಂ ಎಂದು ನಟಿಸಿದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಇಂದು ಬಂಧಿಸಿದ್ದಾರೆ.

ದೆಹಲಿಯಲ್ಲಿ ಸಂಚಲನ ಮೂಡಿಸಿರುವ ಕೊಲೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ, ಬುಲಂದ್ಶಹರ್ ಜಿಲ್ಲೆಯ ಸಿಕಂದರಾಬಾದ್ನ ನಿವಾಸಿ ವಿಕಾಸ್ ಕುಮಾರ್ ಎಂಬಾತ ತಾನು ರಶೀದ್ ಖಾನ್ ಎಂದು ಸುಳ್ಳು ಹೇಳಿದ್ದು, ಆತ ಶ್ರದ್ದಾನನ್ನು ಹತ್ಯೆಗೈದ ಅಫ್ತಾಬ್ ನನ್ನು ಸಮರ್ಥಿಸಿಕೊಂಡಿದ್ದಾನೆ.
ವಿಕಾಸ್ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು, ಆತನ ವಿರುದ್ಧ ಬುಲಂದ್ಶಹರ್ ಮತ್ತು ನೋಯ್ಡಾದಲ್ಲಿ ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಪ್ರಕರಣಗಳು ದಾಖಲಾಗಿವೆ ಎಂದು ಬುಲಂದ್ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಹೇಳಿದ್ದಾರೆ.
ಶ್ರದ್ಧಾ ವಾಕರ್ ಮತ್ತು ಅಫ್ತಾಬ್ ಪೂನಾವಾಲಾ ಅವರು ಮೇ ತಿಂಗಳಲ್ಲಿ ದೆಹಲಿಗೆ ತೆರಳಿದ್ದು, ನಾಲ್ಕು ದಿನಗಳ ನಂತರ ಅವರಿಬ್ಬರ ನಡುವೆ ಜಗಳ ಉಂಟಾಗಿ ಆಕೆಯನ್ನು ಅಫ್ತಾಬ್ ಕತ್ತು ಹಿಸುಕಿ ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಅದನ್ನು ಫ್ರಿಡ್ಜ್ನಲ್ಲಿಟ್ಟು 18 ದಿನಗಳ ಕಾಲ ವಿಲೇವಾರಿ ಮಾಡಿದ್ದಾನೆ.