ಬೆಂಗಳೂರು, ಜೂ. 05 (DaijiworldNews/AA): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ 11 ಮಂದಿ ಕುಟುಂಬಗಳಿಗೆ ಆರ್ಸಿಬಿಯು 10 ಲಕ್ಷ ರೂ. ಪರಿಹಾರ ಘೋಷಿಸಿದೆ.

ಸರ್ಕಾರದ ಭದ್ರತಾ ವೈಫಲ್ಯದಿಂದಾಗಿ ಈ ಸಾವು ನೋವು ಉಂಟಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಸರ್ಕಾರ ಮಾತ್ರ ಇದನ್ನು ಒಪ್ಪಲು ತಯಾರಿಲ್ಲ. ಆದಾಗ್ಯೂ ಸರ್ಕಾರದ ವತಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಹಾಗೆಯೇ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿತ್ತು. ಸರ್ಕಾರದ ಬಳಿಕ ಕೆಎಸ್ಸಿಎ ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಧನವಾಗಿ 5 ಲಕ್ಷ ನೀಡುವುದಾಗಿ ಹೇಳಿತ್ತು.
ಇದೀಗ ಆರ್ಸಿಬಿ ಫ್ರಾಂಚೈಸಿ ಕೂಡ ಸಾವನ್ನಪ್ಪಿದ ಆರ್ಸಿಬಿ ಅಭಿಮಾನಿಗಳ ಕುಟುಂಬಗಳ ನೆರವಿಗೆ ಮುಂದಾಗಿದೆ. ಅಲ್ಲದೆ ಈ ಅವಘಡದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಮಾನಿಗಳ ಚಿಕಿತ್ಸೆಗಾಗಿ ಆರ್ಸಿಬಿ ಕೇರ್ ನಿಧಿಯನ್ನು ಸಹ ರಚಿಸಿದೆ.