ನವದೆಹಲಿ, ಆ. 18 (DaijiworldNews/AA): ಆಪರೇಷನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ತೀರ ಹದಗೆಟ್ಟಿದೆ. ಇದರ ಪರಿಣಾಮ ಕ್ರೀಡೆಯ ಮೇಲೂ ಗೋಚರಿಸುತ್ತಿದೆ. ಇದೀಗ ಇದೇ ಆಗಸ್ಟ್ 29 ರಿಂದ ಬಿಹಾರದ ರಾಜ್ಗಿರ್ನಲ್ಲಿ 2025 ರ ಪುರುಷರ ಹಾಕಿ ಏಷ್ಯಾಕಪ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ.

ಭಾರತ ಸರ್ಕಾರ ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ತಯಾರಾಗಿದೆ. ಆದರೆ ಪಾಕ್ ಹಾಕಿ ಫೆಡರೇಶನ್ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಇದರಿಂದಾಗಿ ಬದಲಿ ಆಯ್ಕೆಯನ್ನು ಹುಡುಕಲು ಆಯೋಜಕರು ಶುರು ಮಾಡಿದ್ದಾರೆ. ಈ ಹಿನ್ನೆಲೆ ಪಾಕ್ ತಂಡದ ಬದಲಿಗೆ ಬಾಂಗ್ಲಾದೇಶ ತಂಡವನ್ನು ಆಡಲು ಆಯೋಜಕರು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಪಾಕ್ ಆಟಗಾರರಿಗೆ ವೀಸಾ ನೀಡಲು ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಹೇಳಿದೆ. ಆದಾಗ್ಯೂ ಪಾಕ್ ತಂಡ ಭಾರತಕ್ಕೆ ಬರಲು ಬಯಸದಿದ್ದರೆ ಅದು ನಮ್ಮ ಸಮಸ್ಯೆಯಲ್ಲ. ಪಾಕಿಸ್ತಾನ ಬರದಿದ್ದರೆ ಬಾಂಗ್ಲಾದೇಶವನ್ನು ಭಾಗವಹಿಸಲು ಈಗಾಗಲೇ ಆಹ್ವಾನಿಸಲಾಗಿದೆ, ಆದರೆ ದೃಢೀಕರಣಕ್ಕಾಗಿ ನಾವು ಇನ್ನೂ ಎರಡು ದಿನ ಕಾಯಬೇಕಾಗುತ್ತದೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸ್ಪಷ್ಟವಾಗುತ್ತದೆ ಎಂದು ಹಾಕಿ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಇದೀಗ ಭಾರತದ ಹೊರಗೂ ನಡೆಯುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಯುಎಇಯಲ್ಲಿ ನಡೆಯಬೇಕಿರುವ ಟಿ20 ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಆಡಬಾರದು ಎಂಬ ಕೂಗು ಕೇಳಿಬರುತ್ತಿದೆ.