ಬಿಹಾರ, ,ಜೂ. 22 (DaijiworldNews/AK): ಟೀಂ ಇಂಡಿಯಾದ ಮತ್ತಿಬ್ಬರು ಕ್ರಿಕೆಟಿಗರು ಡಿಎಸ್ಪಿ ಹುದ್ದೆಗೇರಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ ಇಬ್ಬರು ಯುವ ವೇಗಿಗಳಾದ ಆಕಾಶ್ ದೀಪ್ ಹಾಗೂ ಮುಖೇಶ್ ಕುಮಾರ್ ಅವರನ್ನು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ ಹುದ್ದೆಗೆ ನೇರವಾಗಿ ನೇಮಕ ಮಾಡಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಇತ್ತೀಚೆಗೆ ನಡೆದ ಸಂಪುಟ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಡಿಎಸ್ಪಿ ಹುದ್ದೆಗೇರಿದ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇವರಿಬ್ಬರಿಗೂ ಮೊದಲು ಹರ್ಭಜನ್ ಸಿಂಗ್, ಮೊಹಮ್ಮದ್ ಸಿರಾಜ್, ದೀಪ್ತಿ ಶರ್ಮಾ, ಜೋಗಿಂದರ್ ಶರ್ಮಾ, ರಿಚಾ ಘೋಷ್, ಹರ್ಮನ್ಪ್ರೀತ್ ಕೌರ್ ಈ ಹುದ್ದೆಯನ್ನು ಅಲಂಕರಿಸಿದ್ದರು.
ಬಿಹಾರ ಸರ್ಕಾರ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರನ್ನು ಕ್ರೀಡಾ ಕೋಟಾದಡಿಯಲ್ಲಿ ಡಿಎಸ್ಪಿ ನೇಮಕಾತಿಗಳಿಗೆ ಶಿಫಾರಸು ಮಾಡಿದೆ. ಭಾರತೀಯ ಕ್ರಿಕೆಟ್ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಬಿಹಾರದ ಈ ಇಬ್ಬರು ಆಟಗಾರರನ್ನು ಡಿಎಸ್ಪಿಗಳಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಆಡಳಿತ ಇಲಾಖೆಯು ತನ್ನ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಗೃಹ ಇಲಾಖೆಗೆ ಕಳುಹಿಸಿದೆ.
ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಪ್ರಮುಖ ಪಾತ್ರವಹಿಸಿದ್ದರು. ಇವರಿಬ್ಬರು ರೆಡ್-ಬಾಲ್ ಮತ್ತು ವೈಟ್-ಬಾಲ್ ಕ್ರಿಕೆಟ್ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುಖೇಶ್ ಕುಮಾರ್ ಭಾರತದ ಪರ ಇದುವರೆಗೆ 27 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದರಲ್ಲಿ ಅವರು 32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 3 ಟೆಸ್ಟ್ ಪಂದ್ಯಗಳು, 17 ಟಿ20ಪಂದ್ಯಗಳು ಮತ್ತು 7 ಏಕದಿನ ಪಂದ್ಯಗಳು ಸೇರಿವೆ.
ಆಕಾಶ್ ದೀಪ್ ಇದುವರೆಗೆ ರೆಡ್-ಬಾಲ್ ಕ್ರಿಕೆಟ್ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಿದ್ದು, ಇಲ್ಲಿಯವರೆಗೆ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 28 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಇನ್ನಿಂಗ್ಸ್ವೊಂದರಲ್ಲಿ 99 ರನ್ಗಳಿಗೆ 6 ವಿಕೆಟ್ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆಕಾಶ್ ದೀಪ್ ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದರು.