ತಿರುಮಲ, ಆ. 02 (DaijiworldNews/TA): ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಭಾನುವಾರ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕೇಶ ಮುಂಡನ ಮಾಡಿಸಿಕೊಂಡಿರುವ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಈ ಹಿಂದೆ ತಮ್ಮ ವಿಶಿಷ್ಟ ‘ಪ್ಲಾಟಿನಂ ಬ್ಲಾಂಡ್ ಬಝ್ ಕಟ್’ ಹೇರ್ಸ್ಟೈಲ್ ಮೂಲಕ ಸುದ್ದಿಯಾಗಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಸಂಪೂರ್ಣ ಕೇಶ ಮುಂಡನ ಮಾಡಿಸಿಕೊಂಡು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಅವರ ಹೊಸ ಲುಕ್ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹಾರ್ದಿಕ್ ಪಾಂಡ್ಯ ಅವರು ಮುಂಜಾನೆ ನಡೆದ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನಂ ಅಧಿಕಾರಿಗಳು ಹಾಗೂ ಅರ್ಚಕರು ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ದರ್ಶನದ ಬಳಿಕ ರಂಗನಾಯಕುಲ ಮಂಟಪದಲ್ಲಿ ಅರ್ಚಕರು ವೇದ ಆಶೀರ್ವಚನ ನೀಡಿ ತೀರ್ಥ ಪ್ರಸಾದ ವಿತರಿಸಿದರು. ಈ ಆಧ್ಯಾತ್ಮಿಕ ಭೇಟಿಯ ವೇಳೆ ಅವರ ಆಪ್ತ ಗೆಳತಿ ಮಹಿಕಾ ಶರ್ಮಾ ಕೂಡ ಜೊತೆಯಲ್ಲಿದ್ದರು. ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲವು ಸರಣಿಗಳಿಂದ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಸಿದ್ಧರಾಗಿರುವ ಅವರು ಶೀಘ್ರದಲ್ಲೇ ಭಾರತ ತಂಡದ ಏಕದಿನ ಹಾಗೂ ಟಿ20 ತಂಡಗಳಿಗೆ ಲಭ್ಯರಾಗುವ ನಿರೀಕ್ಷೆಯಿದೆ.
ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ಹಾರ್ದಿಕ್ ಪಾಂಡ್ಯ ಅವರ ಮುಂದಿನ ಪ್ರಮುಖ ಗುರಿ 2027ರ ಏಕದಿನ ವಿಶ್ವಕಪ್ ಗೆಲ್ಲುವುದಾಗಿದೆ. ಜೊತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಭಾರತದ ಪರ ಚಿನ್ನದ ಪದಕ ಗೆಲ್ಲುವ ಕನಸನ್ನೂ ಹೊಂದಿದ್ದಾರೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಅವರು ಕಠಿಣ ಫಿಟ್ನೆಸ್ ತರಬೇತಿ ನಡೆಸುತ್ತಿದ್ದು, ಪ್ರತಿದಿನ ಸುಮಾರು 12 ಓವರ್ಗಳವರೆಗೆ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಪೂರ್ಣ 10 ಓವರ್ಗಳನ್ನು ಪರಿಣಾಮಕಾರಿಯಾಗಿ ಎಸೆಯುವ ಸಾಮರ್ಥ್ಯ ಮರಳಿ ಪಡೆಯುವತ್ತ ಅವರು ಗಮನ ಹರಿಸಿದ್ದಾರೆ.