ಪುಣೆ, ನ 10 (DaijiworldNews/DB): ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಯನ್ನು ದೇಶದಲ್ಲಿ ಏಕಕಾಲದಲ್ಲಿ ನಡೆಸಲು ಚುನಾವಣಾ ಆಯೋಗ ಸಿದ್ದವಿದೆ. ಆದರೆ ಶಾಸಕಾಂಗವೇ ಇದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ಕುಮಾರ್ ಹೇಳಿದ್ದಾರೆ.
![](https://daijiworld.ap-south-1.linodeobjects.com/Linode/img_tv247/DB-05112022-rajiv.jpg)
ಪುಣೆಯಲ್ಲಿ ನಡೆದ ಮತದಾರರ ಪರಿಷ್ಕರಣೆ ಪಟ್ಟಿ ಬಿಡುಗಡೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ಚುನಾವಣೆಗಳನ್ನು ದೇಶದಲ್ಲಿ ಏಕಕಾಲದಲ್ಲಿ ನಿಭಾಯಿಸಲು ಆಯೋಗ ಸಿದ್ದವಿದೆ. ಆದರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ನಿರ್ಧಾರವನ್ನು ನಾವು ತೆಗೆದುಕೊಳ್ಳಲು ಆಗುವುದಿಲ್ಲ. ಅದರ ವ್ಯಾಪ್ತಿ ನಮ್ಮದಲ್ಲ. ಹೀಗಾಗಿ ಆ ನಿರ್ಧಾರ ಶಾಸಕಾಂಗಕ್ಕೆ ಬಿಟ್ಟದ್ದು ಎಂದರು.
ಏಕಕಲಾದಲ್ಲಿ ಚುನಾವಣೆ ನಡೆಸಲು ಸಂಪನ್ಮೂಲ ದೊಡ್ಡ ಮಟ್ಟದಲ್ಲಿ ಬೇಕಾಗುವುದರಿಂದ ವಿವಿಧ ಚಟುವಟಿಕೆಗಳಲ್ಲಿ ಏರುಪೇರಾಗುವ ಸಂಭವವಿದೆ. ಆದರೆ ಸದ್ಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಪ್ರತ್ಯೇಕವಾಗಿಯೇ ನಡೆಯುವುದರಿಂದಲೂ ಕೋಟ್ಯಾಂತರ ರೂ. ಖರ್ಚು ಸರ್ಕಾರದ ಮೇಲೆ ಬೀಳುತ್ತದೆ ಎಂದೂ ಅವರು ಪ್ರತಿಪಾದಿಸಿದರು.
ಮಾನವ ಶ್ರಮ, ಸಮಯ, ಭಾರೀ ಮೊತ್ತದ ಹಣ ಏಕಕಾಲದಲ್ಲಿ ಚುನಾವಣೆ ನಡೆದರೆ ಉಳಿತಾಯವಾಗುತ್ತದೆ. ಅಲ್ಲದೆ ಮೂಲ ಸೌಕರ್ಯ, ಸಿಬಂದಿ, ರಕ್ಷಣಾ ವೆಚ್ಚವೂ ಕಡಿಮೆಯಾಗುವ ಸಂಭವವಿದೆ ಎಂದವರು ತಿಳಿಸಿದರು.
ಒಂದು ದೇಶ, ಒಂದು ಚುನಾವಣೆಯ ಪ್ರಸ್ತಾವವನ್ನು ಕೇಂದ್ರ ಮುಂದಿಟ್ಟಿದೆ. ಇದಕ್ಕೂ ಮೊದಲು 1952, 1957 ಮತ್ತು 1962ರಲ್ಲಿ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿತ್ತಾದರೂ 1968 ಮತ್ತು 69ರಲ್ಲಿ ಹಲವು ರಾಜ್ಯಗಳಲ್ಲಿ ಅವಧಿ ಪೂರ್ಣಗೊಳ್ಳುವುದಕ್ಕೆ ಮುನ್ನವೇ ವಿಧಾನಸಭೆ ವಿಸರ್ಜನೆಯಾಗಿತ್ತು. 1970ರಲ್ಲಿ ಲೋಕಸಭೆಯಲ್ಲೂ ಅವಧಿಪೂರ್ವ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಏಕಕಾಲದ ಚುನಾವಣೆಗೆ ಅಡ್ಡಿಯಾಗಿತ್ತು ಎಂದವರು ನೆನಪಿಸಿಕೊಂಡರು.